ನಾಪತ್ತೆಯಾದ ಯುವಕನನ್ನು ಪತ್ತೆ ಮಾಡಿದ ಸಾಕುನಾಯಿ- ಘಟನೆ ಹಿಂದಿದೆ ರೋಚಕ ಕಥೆ – ಕರುನಾಡ ನ್ಯೂಸ್


ಉಡುಪಿ: ಕಣ್ಮರೆಯಾದ ಯುವಕನೊಬ್ಬನನ್ನು ಮನೆಯ ಸಾಕುನಾಯಿ ಹುಡುಕಿದ ಘಟನೆ ಉಡುಪಿಯಲ್ಲಿ (Udupi) ನಡೆದಿದೆ. ಏಳು ದಿನ ಕಾಡು-ಮೇಡಿನಲ್ಲಿ ಹುಡುಕಿದ ಪ್ರಕರಣ ಬಹಳ ಕೌತುಕಕ್ಕೆ ಕಾರಣವಾಗಿತ್ತು. ಇದೀಗ ಆ ಘಟನೆ ಹಿಂದೆ ಕುತೂಹಲಕಾರಿ ಕಥೆಯೊಂದು ಕೇಳಿಬಂದಿದೆ. ಉಡುಪಿ ಜಿಲ್ಲೆ ಅಮವಾಸ್ಯೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ಶೀನ ನಾಯ್ಕ ಕುಟುಂಬದಲ್ಲಿ ಈ ಘಟನೆ ನಡೆದಿದೆ. ಶೀನ ನಾಯ್ಕರ ಮಗ ವಿವೇಕಾನಂದ ನಾಪತ್ತೆಯಾದಾತ. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವಿವೇಕಾನಂದ ಸೆಪ್ಟೆಂಬರ್ 16 ರಂದು ಮನೆಯಿಂದಲೇ ನಾಪತ್ತೆಯಾಗಿದ್ದ. ಮನೆಯಿಂದ ಹೊರಡುವಾಗ ಸಾಕು ನಾಯಿ ಕೂಡ ವಿವೇಕಾನಂದ ಜೊತೆಗೆ ತೆರಳಿತ್ತು. ವಾರಗಳ ಕಾಲ ಕಾಡಿನಲ್ಲಿ ಅಲೆದಾಡಿದ್ದ ವಿವೇಕಾನಂದ, ಅನ್ನ ಆಹಾರವಿಲ್ಲದೆ ಬರಿ ನೀರು ಕುಡಿದು ಜೀವಂತವಿದ್ದ. ಈತನನ್ನು ಹುಡುಕುವ ಸಲುವಾಗಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಾಕಷ್ಟು ಶೋಧ ನಡೆಸಿತ್ತು. ಈ ಭಾಗದಲ್ಲಿ ಚಿರತೆಗಳ ಕಾಟ ಜಾಸ್ತಿ ಆಗಿರುವ ಕಾರಣ ಯುವಕ ಚಿರತೆಗೆ ಆಹಾರವಾಗಿರಬಹುದು ಎನ್ನುವ ಶಂಕೆ ಕೂಡ ವ್ಯಕ್ತವಾಗಿತ್ತು. ಆಶ್ಚರ್ಯಕರ ರೀತಿಯಲ್ಲಿ 8 ದಿನಗಳ ಬಳಿಕ ಕಬ್ಬಿನಾಲೆಯ ಸಮೀಪದ ಮನೆ ಒಂದರ ಬಳಿ ನಿತ್ರಾಣಗೊಂಡ ಸ್ಥಿತಿಯಲ್ಲಿ ವಿವೇಕಾನಂದ ಪತ್ತೆಯಾಗಿದ್ದಾನೆ. ಮನೆಯ ನಾಯಿಯ ಸಹಾಯದಿಂದ ಊರಿಗೆ ಮರಳಿದ್ದ ಯುವಕ, ನಿತ್ರಾಣಗೊಂಡಿರುವ ಹಿನ್ನೆಲೆಯಲ್ಲಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಸಾಕಿದ ಮನೆಯ ನಿಯತ್ತನ್ನು ಉಳಿಸಿಕೊಂಡಿರುವ ನಾಯಿಯ ಬಗ್ಗೆ ಇಡೀ ಊರು ಸಂಭ್ರಮಿಸುತ್ತಿದೆ. ಕುಟುಂಬ, ಸುತ್ತಮುತ್ತಲ ಗ್ರಾಮಸ್ಥರು ಶೀನಾ ನಾಯಕರ ಮನೆಗೆ ಬಂದು ಶುಭ ಕೋರಿದ್ದಾರೆ. ಸಾಕು ನಾಯಿ ಚಿಂಟುವನ್ನು ಅಭಿನಂದಿಸಿದ್ದಾರೆ.ವಿವೇಕಾನಂದನನ್ನು ಹುಡುಕಿದ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಒಂದು ವಾರಗಳ ಕಾಲ ಎಲ್ಲಾ ಕಡೆ ಹುಡುಕಾಡಿದರು. ದೈವ ದೇವರ ಮೊರೆ ಹೋಗಿದ್ದರು. ಜ್ಯೋತಿಷಿ ಮತ್ತು ಪ್ರಶ್ನಾ ಚಿಂತನೆ ಮಾಡುವವರನ್ನು ಸಂಪರ್ಕ ಮಾಡಿದ್ದರು. ಈ ಸಂದರ್ಭ ಉತ್ತರ ಕರ್ನಾಟಕ ಭಾಗದ ಮಹಿಳಾ ಜ್ಯೋತಿಷಿ ಒಬ್ಬರು ಜಮೀನಿನಲ್ಲಿರುವ ಒಂದು ಕಲ್ಲಿನಲ್ಲಿ ದೈವಿಶಕ್ತಿ ಇದೆ. ಅದೇ ಆಸು-ಪಾಸಿನಲ್ಲಿ ಕಣ್ಮರೆಯಾದ ಯುವಕ ಕಾಣಿಸಿಕೊಳ್ಳುತ್ತಿದ್ದಾನೆ. ಆ ಕಲ್ಲಿಗೆ ಪೂಜೆ ಸಲ್ಲಿಸಿ ನಿಷ್ಠೆಯಿಂದ ನಡೆದುಕೊಳ್ಳಿ ಎಂದು ಸಲಹೆ ನೀಡಿದ್ದರು.





Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ