ಕೋಲಾರ: ವಿಚ್ಛೇದಿತ ಪತ್ನಿಗೆ ಜೀವನ ನಿರ್ವಹಣೆ ಭತ್ಯೆ ನೀಡುವ ವಿಚಾರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವುದು ಶ್ರೀನಿವಾಸಪುರದ ನಂಬಿಹಳ್ಳಿಯಲ್ಲಿ ನಡೆದಿದೆ. ಕೊಲೆಯಾದ (Murder) ಮಹಿಳೆಯನ್ನು ರಾಧ ಎಂದು ಗುರುತಿಸಲಾಗಿದೆ. ಆಕೆಯ ಮಾಜಿ ಪತಿ ನಾಗೇಶ್ ಕೊಲೆಗೈದ ಆರೋಪಿಯಾಗಿದ್ದಾನೆ. ಆತ ವಿಚ್ಛೇದಿತ ಪತ್ನಿ ರಾಧಳಿಗೆ 8 ಸಾವಿರ ರೂ. ಮಾಸಿಕ ಭತ್ಯೆ ನೀಡಬೇಕು ಎಂದು ನ್ಯಾಯಾಲಯ (Court) ವಿಚ್ಛೇದನ ನೀಡುವ ವೇಳೆ ತೀರ್ಪು ನೀಡಿತ್ತು. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಗಲಾಟೆ ಸಹ ನಡೆಯುತ್ತಿತ್ತು. ಈಗ ಇಬ್ಬರ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಅಲ್ಲದೇ ರಾಧಳನ್ನು ಬಿಡಿಸಲು ಹೋದ ಆಕೆಯ ಸಹೋದರಿ ಹಾಗೂ ತಂದೆಯ ಮೇಲೂ ಮಚ್ಚಿನಿಂದ ಆರೋಪಿ ದಾಳಿ ನಡೆಸಿದ್ದಾನೆ. ಆರೋಪಿ ಕೊಲೆಯ ಬಳಿಕ ಮನೆಯೊಂದರ ಒಳಗೆ ಅಡಗಿಕೊಂಡಿದ್ದ. ಒಳಗೆ ಬರುವ ಪ್ರಯತ್ನ ಮಾಡಿದರೆ ಸಿಲಿಂಡರ್ನಿಂದ ಗ್ಯಾಸ್ ಲೀಕ್ ಮಾಡಿ ಬೆಂಕಿ ಹಚ್ಚಿಕೊಳ್ಳುವ ಬೆದರಿಕೆ ಹಾಕಿದ್ದಾನೆ. ಆದರೂ ಪೊಲೀಸರು ಆತನ ಬಂಧನಕ್ಕೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಮೇಲೂ ದಾಳಿ ನಡೆಸಿದ್ದು, ಆರೋಪಿಯ ಕಾಲು ಹಾಗೂ ಕೈಗೆ ಐದು ಸುತ್ತಿನ ಗುಂಡು ಹಾರಿಸಿ ಬಂಧಿಸಲಾಗಿದೆ. ಈ ವೇಳೆ ಉಂಟಾದ ಜನಜಂಗುಳಿಯನ್ನು ಚದುರಿಸಲು ಪೊಲೀಸರು ಅಶ್ರುವಾಯುವನ್ನು ಸಿಡಿಸಿದ್ದಾರೆ. ಕೋಲಾರ ಎಸ್ಪಿ ನಾರಾಯಣ್ ಸೇರಿದಂತೆ 10 ಜನ ಪೊಲೀಸರಿಗೆ ಈ ವೇಳೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ನಾಗೇಶ್ಗೂ ಸಹ ಚಿಕಿತ್ಸೆ ನೀಡಲಾಗುತ್ತಿದೆ.