ಬೆಂಗಳೂರು: ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣ ನೀಡುವ ಮೂಲಕ ಯುವಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಅತಿ ಅವಶ್ಯಕವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ವಿಶ್ವ ಹೆಪಟೈಟಿಸ್ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೆಪಟೈಟಿಸ್ (Hepatitis) ಸೋಂಕು ಆಹಾರ ಮತ್ತು ಜೀವನಶೈಲಿಯಲ್ಲಿ ಆಗುವ ಬದಲಾವಣೆಗಳಿಂದ ಬರುತ್ತದೆ. ಮಾನವನ ಅಂಗಾಂಗದಲ್ಲಿ ಯಕೃತ್ತಿಗೆ (liver) ನಾವು ಹೆಚ್ಚು ಪ್ರಾಮುಖ್ಯತೆ ನೀಡಬೇಕಾಗಿದೆ. ಲಿವರ್ ಅನ್ನು ನಾವು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೋ ಅದು ನಮಗೆ ಅಷ್ಟೇ ಉತ್ತಮ ಆರೋಗ್ಯವನ್ನು ನೀಡುವಂತಹ ಒಂದು ಅಂಗಾಂಗವಾಗಿದೆ ಎಂದು ತಿಳಿಸಿದರು.
ಮಾನವನ ದೇಹದಲ್ಲಿ ಲಿವರ್ 500 ಕ್ಕೂ ಹೆಚ್ಚು ಕಾರ್ಯವನ್ನು ಮಾಡುವ ಪ್ರಮುಖ ಅಂಗಾಂಗ. A,B,C,D ಮತ್ತು E ರೀತಿಯ ಹೆಪಟೈಟಿಸ್ ವೈರಸ್ಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ B ಮತ್ತು C ವೈರಸ್ ಲಿವರ್ ಡ್ಯಾಮೇಜ್ ಮಾಡುವ ವೈರಸ್ಗಳಾಗಿದ್ದು, ಮಾರಕ ಕಾಯಿಲೆಯನ್ನು ಉಂಟುಮಾಡುತ್ತವೆ ಎಂದರು. ಹೆಪಟೈಟಿಸ್ ವೈರಸ್ನಿಂದಾಗಿ ದೇಶದಲ್ಲಿ ಇಂದು 3.5 ಕೋಟಿಗೂ ಹೆಚ್ಚು ಜನರು ಇಂದು ಲಿವರ್ ಸಮಸ್ಯೆ ಎದುರಿಸುತ್ತಿದ್ದಾರೆ. ಕರ್ನಾಟದಲ್ಲಿ 1% ರಷ್ಟು ಹೆಪಟೈಟಿಸ್ ಸೋಂಕು ಕಂಡುಬಂದಿದೆ. 2030 ರೊಳಗೆ ಹೆಪಟೈಟಿಸ್ C ವೈರಸ್ ಮುಕ್ತ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಲಾಗಿದ್ದು, ಹೆಪಟೈಟಿಸ್ B ವೈರಸ್ ಅನ್ನು ಕೂಡಾ ನಿಯಂತ್ರಣದಲ್ಲಿಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು ಈ ನಿಟ್ಟಿನಲ್ಲಿ ಸಮಾಜದಲ್ಲಿ ಜಾಗೃತಿ ಅತ್ಯವಶ್ಯಕವಾಗಿದೆ ಹೆಪಟೈಟಿಸ್ ವೈರಸ್ ಒಂದೇ ಅಲ್ಲ, ಕಿಡ್ನಿ ವೈಫಲ್ಯದಂತಹ ಮಾರಕ ಕಾಯಿಲೆಗಳಿಂದ ಯುವಕರನ್ನು ದೂರವಿಡಲು ವಿದ್ಯಾರ್ಥಿಗಳ ಪಠ್ಯದಲ್ಲಿಯೇ ಆರೋಗ್ಯ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಸಚಿವರು ಪ್ರತಿಪಾದಿಸಿದರು. ಯುವಕರು ಒಂದೆಡೆ ವ್ಯಸನಗಳಿಗೆ ಮಾರುಹೋಗಿ ನಂತರದ ದಿನಗಳಲ್ಲಿ ಕಾಯಿಲೆಗಳಿಗೆ ಈಡಾಗುತ್ತಾರೆ. ಅಲ್ಲದೇ ಆಹಾರ ಪದ್ಧತಿ, ಜೀವನ ಶೈಲಿಯಲ್ಲಾಗುವ ಬದಲಾವಣೆಗಳು ಇಂದು ಮಾರಕ ವೈರಸ್ಗಳು ಮನಷ್ಯನ ಅಂಗಾಂಗಗಳಿಗೆ ಸಮಸ್ಯೆಯುಂಟುಮಾಡುತ್ತಿವೆ ಎಂದರು. ಪ್ರೌಢ ಹಾಗೂ ಪದವಿ ಪಠ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣವನ್ನು ನೀಡುವ ಮೂಲಕ ಬಹುತೇಕ ಯುವಕರನ್ನು ಜಾಗೃತಗೊಳಿಸಬಹುದು. ಮಾರಕ ಕಾಯಿಲೆಗಳನ್ನು ಯುವಕರಿಂದ ದೂರವಿಡಬಹುದು. ಉತ್ತಮ ಆರೋಗ್ಯ ನೀಡುವ ಆಹಾರಗಳ ಬಗ್ಗೆ ಅರಿವು ಮೂಡಿಸಬೇಕು. ಹೆಪಟೈಟಿಸ್ನಂತಹ ವೈರಸ್ಗಳು, ಹೇಗೆ ಬರುತ್ತವೆ, ಲಿವರ್ ನ ಮಹತ್ವದ ಬಗ್ಗೆ ಶಿಕ್ಷಣ ಅತ್ಯಗತ್ಯ. ಹೆಪಟೈಟಿಸ್ ವೈರಸ್ ಆರಂಭದಲ್ಲೇ ಪತ್ತೆ ಹಚ್ವಿದರೆ ಲಿವರ್ ಫೇಲ್ಯೂರ್ ಆಗುವುದನ್ನು ತಡೆಗಟ್ಟಬಹುದಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸ್ಕ್ರೀನಿಂಗ್ ಮಾಡುವುದರ ಜೊತೆಗೆ ಲಸಿಕೆ ಹಾಕುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ವಿಶೇಷವಾಗಿ ಗರ್ಭಿಣಿಯರಿಗೆ ಹೆಪಟೈಟಿಸ್ B ಸ್ಕ್ರೀನಿಂಗ್ ಕಡ್ಡಾಯವಾಗಿ ಮಾಡಿ. ಪಾಸಿಟಿವ್ ಗರ್ಭಿಣಿಯರಿಗೆ ಜನಿಸುವ ಶಿಶುಗಳಿಗೆ ಹೆಪಟೈಟಿಸ್ ಬಿ ಚುಚ್ಚುಮದ್ದು ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ತಿಳಿಸಿದರು.a